ಶನಿವಾರ, ಅಕ್ಟೋಬರ್ 29, 2011

ಅವಳು ಬೇಕಾಗಿದ್ದಾಳೆ!!!

ಅಂದು ಅವಳಿಟ್ಟ ಮುತ್ತು ಕೆನ್ನೆ ತುಂಬಿದಾಗ
ತುಟಿ ಅದುರಿತ್ತು, ಕಾಮವಾಂಛೆಯ ಹಂಬಲ
ಇಂದವಳ ಮುದ್ದು ಮುಖ ನನ್ನ ಕಣ್ಣೊಳಗೆ
ಹನಿಯಾಗಿ ನಿಂತಾಗ, ತುಟಿ ಕಂಪಿಸಿತ್ತು

ನಾಲಗೆಯೂ ಅವಳ ಪ್ರೀತಿಯ ಅಳೆಯಲಿಲ್ಲ
ನನ್ನ ಕಿವಿಯೂ ಓಗೊಡಲಿಲ್ಲ, ಅವಳು ಬಯಸಿದ್ದ
ಹಿತದ ಬದುಕ, ನೋವ ನುಂಗಿ, ನಗುವ
ಉಣಿಸುವ ಹೃದಯ ವೈಶಾಲ್ಯತೆಯ ಪರಿ

ಅಲ್ಲಿ ಪ್ರೀತಿಯಿತ್ತು, ಪ್ರೇಮವಿತ್ತು, ಅದೇ
ಕಾಮದಳ್ಳುರಿಯ ಕಹಿ ಮಾರು ದೂರವಿತ್ತು
ಅಧಮ ನಾನು, ಕ್ಷಣಿಕ ಸುಖದ ಅಮಲು
ನನ್ನ ಕರುಳೊಳಗೆ ಬೆಂಕಿಯಿಟ್ಟಾಗ, ಬೂದಿ
ಆದದ್ದು ಕಪಟವಿಲ್ಲದ ಅವಳ ಒಲವ ದನಿ

ಈಗ ಮತ್ತೆ ಕಮರಿದೆ, ಹುಡುಕ ಬೇಕು
ನನ್ನ ಅಧಮತನದ ಕೊಳಕಿಗೆ ವಿಷವ
ಬೆರೆಸಿ ಹೊಡೆದೋಡಿಸುವ ಪ್ರೀತಿ ಬುಗ್ಗೆ
ಎಲ್ಲಿ ಎಲ್ಲಿ ಎಲ್ಲಿದೆ, ಅವಳಿಲ್ಲದೆ ನನಗೆ
ಸಿಗುವುದೇ ಅದರ ಸಿಹಿ ಸಿಂಚನ?

ಗುರುವಾರ, ಅಕ್ಟೋಬರ್ 27, 2011

ಬಲಿ(ತು) ಬಿದ್ದವರು!

ಇಂದು ಕಂದು ಕುಡಿ, ಮೊಗ್ಗೆನಲೇ?
ಸುಳಿವ ಗಾಳಿಗೆ ಕಿವಿ ನಿಮಿರಿಸಿ
ಜೀವವಿತ್ತ ಕೊಂಬೆಯ ರಸವ ಹಿಂಡಿ
ಬಣ್ಣ ಬದಲಾಯಿಸಿ,ಮತ್ತೆ ಹಸಿರ
ನರಗಳು ಬಲಿತಾಗ ಕ್ಷಣ ನಕ್ಕೆ..

ಈಗ ಎದೆಯೊಡ್ಡಿ ನಿಲ್ಲುವ ಚಿಗುರು,
ಗಾಳಿಯೇನು? ಬಿರುಗಾಳಿಯಾಗಲಿ,
ಕೊಂಬೆಯ ಹೊಯ್ದಾಟ, ಶಕ್ತಿಹೀನ
ಮತ್ತೆ ನಕ್ಕಿದ್ದು ಬಲಿತ ಹಸಿರ ಎಲೆ
ಉಸಿರಾಟದಲೇ ಗಾಳಿಯ ತಿಂದು
ಸಿಪ್ಪೆ ಎದ್ದ ಕೊಂಬೆಗಳ ಹಳಿದು

ಮೂರು ದಿನ ಎಲ್ಲೋ ತೂತು
ಹೊಡೆದಿತ್ತು, ಮೂರು ಎಲೆಗಳ
ಒಟ್ಟು ಪೋಣಿಸಿ, ಗೂಡು ಕಟ್ಟಿ
ಇರುವೆ ನಕ್ಕಾಗ ಹಸಿರೆಲೆಯ
ತೊಟ್ಟು ಕಮರಿ, ನೇತಾಡಿದ್ದು
ಇರುವೆ ಬಾಯಿಯ ಹುಳಿಯಂಟಿಗೆ

ಮತ್ತದೇ ಕಂದುಗಟ್ಟಿತ್ತು, ಹೊದಿಕೆ
ಕಳಚಿ ನಿಂತು, ನರ ನಾಡಿ ಮಾತ್ರ,
ಈಗ ಎಲೆಯಲ್ಲ, ತರಗೆಲೆ ಕಾಲಡಿ
ಗಾಳಿಯೂ ಮೂಸಿ ನೋಡದ
ಇರುವೆಯೂ ಮುತ್ತದ, ಮುದಿಗೊಡ್ಡು
ಮಲಗಿದ್ದು ಅಂಗಾತ, ಕಿಡಿ ಹತ್ತುವ
ಪುಡಿಗಲ್ಲುಗಳ ರಾಶಿಯ ಜೊತೆ...!
-------
ಚಿತ್ರಕೃಪೆ: ಗೂಗಲ್ ಇಮೇಜಸ್

ಭಾನುವಾರ, ಅಕ್ಟೋಬರ್ 23, 2011

ಬಳ್ಳಿ ಬೆಳೆಸಿ ಹಣ್ಣಾಗಿ!

ಒಂದೆಳೆಯ ಬಳ್ಳಿ, ಹದಿಮೂರು ಚಿಗುರುಗಳ ಬಳುಕಲಿ
ತೆಂಗಿನ ಮರವಪ್ಪಿ ಆಕಾಶ ನೋಡುವ ಆಸೆಯೇನೋ
ಮೊನ್ನೆ ಊರಿನಂಗಳದಿಂದ ಕಿತ್ತು ತಂದ ಬೇರ ಕುಡಿ
ಇಂದು ಚಿಗುರೊಡೆದು, ನನ್ನನೇ ಏರಿ ನಿಂತು
ಹಸಿರಲೇ ನಕ್ಕು ಕಿಸಕ್ಕೆಂದಾಗ, ಮೆದುಳಿಗೆ ಸೂಜಿ...!

ಪೋಷಿಸಿದ್ದೆ, ಎಲ್ಲಿಂದಲೋ ಎಮ್ಮೆ ಕರುಗಳ ಸೆಗಣಿ ಎತ್ತಿ
ನನ್ನ ನಯವಾದ ಕೆಂಪನೆಯ ಸೂಕ್ಷ್ಮ ಅಂಗೈಗಳಿಗೆ ಮೆತ್ತಿ,
ಮೂಗಿನ ನರಗಳೂ ಅದುರಿದ್ದವು ನಾತಕೆ, ಹಿತವಿತ್ತು
ಬಯಕೆ ಕಂಗಳ ಹೊತ್ತ ಹೊಟ್ಟೆಗೆ ಅನ್ನದಗುಳಿನ ತುತ್ತು!

ಇಂದು ನಕ್ಕರೂ ಬೇರ ಬುಡಕೆ ನೀರನೀವೆ ಎಲ್ಲ ಮರೆತು
ಮತ್ತದೇ ಸೆಗಣಿಯ ಅಮೃತ ಕೊಂಕ ತೊರೆದು,
ಏರಿ ನಿಂತ ಬಳ್ಳಿಗದೋ ಕುಹಕ, ಭುಜ ನೆಕ್ಕುವ
ಕಾಗೆಯ ಹಸಿ ಹಿಕ್ಕೆಯಾ ಕಂಡು ನಕ್ಕಿತ್ತೇನೋ?

ಕ್ಷಣ ಯೋಚಿಸುವೆ, ಕುಡುಗೋಲು ಕೈಗೆತ್ತಿಕೊಳಲೇ
ಒಂದೇಟಿನಲಿ ಬುಡವಿಲ್ಲದೆಯೇ ನಿಂತೀತೆ ಅಹಂ ತೊರೆದು?
ಬೇಡವೆನುತದೆ ಮರುಘಳಿಗೆ ಮನಸು, ಮೆರೆಯ ಬಿಡು...
ಹಸಿರ ಅಹಮಿಗೆ ಹುಳದ ಹುಳುಕ ತೋರಣ ಮೆತ್ತಿ
ಬುಡದ ಬೇರ ಉಸಿರಿನಲೂ ನನ್ನ ಕರೆದೀತು ಎಂಬ ಭಾವ!
=======

ಚಿತ್ರಕೃಪೆ: ಗೂಗಲ್ ಇಮೇಜಸ್

ಶನಿವಾರ, ಅಕ್ಟೋಬರ್ 22, 2011

ಒಂದು ಒಂಟಿ ಪ್ರಶ್ನೆ ಮತ್ತು ಸೂರ್ಯ....

ಒಂಟಿ ತಾನೆಂದು ಬೆಂಕಿಯಾದನೆ ಸೂರ್ಯ
ಹೊತ್ತಿ ಉರಿವವನಿಗೊಂದು ಪ್ರಶ್ನೆ ಕೇಳಬಹುದೇ ?

ಸೂಕ್ತ ಯಾವುದು ಸಮಯ ಯಾವ ಕಾಲ
ಎಷ್ಟು ಹೊತ್ತಿಗೆ ಪ್ರಶ್ನೆಗಳ ಇಡಲೆಂಬ ಕಸಿವಿಸಿ...

ಪೂರ್ವ ತೀರದ ಗರ್ಭ ಸೀಳಿ, ಒಳ ಹೊಕ್ಕು
ಅವನು ಹುಟ್ಟುವ ಮೊದಲೇ ಗುಣುಗುಣಿಸಲೇ?
ಇನ್ನು ಎಚ್ಚೆತ್ತಿರದ ಬಾನಲಿ ನೆತ್ತರ ಬಣ್ಣ ತುಂಬಿ
ಎಳೆ ನಗುವ ಚೆಲ್ಲಿ, ಕಣ್ಣು ಮಿಟುಕಿಸುವ ಕಾಲ
ಮುಂಜಾವಿನಲಿ ಮುದ್ದಿಟ್ಟು ಮಾತನಾಡಿಸಲೇ?
ನಡುನೆತ್ತಿಯಾ ಮೇಲೆ ಕೊತ ಕೊತ ಕುದಿವ
ಬಿಸಿ ಘಳಿಗೆ, ನಡು ಮಧ್ಯಾಹ್ನ, ಕಡು ಹಳದಿ
ಕಿರಣಗಳ ನಡುವೆ ತೂರಿ ಗಹಗಹಿಸಿ ಕೇಳಲೇ?
ಚಿತ್ತಾರದ ಗೋಧೂಳಿ, ಚಿಲಿಪಿಲಿಗಳ ನಾದ,
ಉದರ ತುಂಬಿ ಗೂಡು ಸೇರುವ ತವಕಗಳ
ನಡುವೆ ಪಡುವಣದ ಕಡಲ ತೆಕ್ಕೆಯಲಿ ಸೇರಿ
ನೀಲ ಸಾಗರದ ನೀರ ಬಣ್ಣವ ಕೆಂಪಗಾಗಿಸಿ
ಮೋಕ್ಷ ಪಡೆವ ಕ್ಷಣದಲಿ ನಾ ಅರುಹಲೇ?

ಹೇಳು ಭಾನು, ಮೂಡಣದಲ್ಲಿ ಮುತ್ತ ಸಿಂಚನ
ನಡುನೆತ್ತಿಯ ಮೇಲೆ ಬೆಂಕಿಯುಗುಳು, ಕೆಂಡ,
ಮುಸ್ಸಂಜೆಯಾ ಮುಪ್ಪಿಗೆ ಮುದವನೀವ ನೀನು,
ಹೇಳು ಒಬ್ಬಂಟಿ ಯಾಕಾದೆ ಇಡಿಯ ಬಾನಿಗೆ?

ಶುಕ್ರವಾರ, ಅಕ್ಟೋಬರ್ 21, 2011

ನನ್ನ ಕವಿತೆಯೆಂಬ ಗುಲಾಬಿ ಮತ್ತು ಕೃತಿಚೌರ್ಯ...

ಬಣ್ಣ ಕೆಂಪು ಪಕಳೆಗಳದ್ದು, ಹಸುರ ನಡುವೆ
ನಗುವ ಸೂಸಿ ನಿಂತ ಪರಿ ಕಷ್ಟವಿಲ್ಲದೆ
ಗಾಳಿ ಕೂಡ ಮುತ್ತನಿತ್ತು ಬೇದವಿಲ್ಲದೆ
ಅರಳಿ ನಿಂತ ಗುಲಾಬಿಯ ಚೆಲುವ ಕಂಡು
ನೀಲಾಕಾಶದಿ ಉರಿವ ಸೂರ್ಯನು ಮೋಹಿ
ಕಿರಣಗಳೆಂಬ ಮನ್ಮಥ ಬಾಣವ ಹೂಡಿ..
ಬೇರು ತಾನು ಮಣ್ಣ ಕೆದಕಿ ಸಾರ ಹೀರಿ
ತುತ್ತನಿತ್ತ ನೋವ ಬಲ್ಲವನಾರು ಬಣ್ಣವೀಯಲು?

ಶನಿವಾರ, ಅಕ್ಟೋಬರ್ 15, 2011

ನಿರಾಸೆ

ಆಗಸದೆತ್ತರದಲಿ ಹಾರುವ ಹಕ್ಕಿಯ
ರೆಕ್ಕೆಗಳ ನೆರಳು ಗೋಚರಿಸಿತ್ತು,
ಇಣುಕಿ ನೋಡಿದೆ, ಅಲ್ಲಿರಲಿಲ್ಲ
ಮಾರು ದೂರ ಹಾರಿಯಾಗಿತ್ತು..

ನದಿಯ ತಟ, ಮರಳಿನ ರಾಶಿ
ಹರಿವ ನೀರಲಿ ಮೀನು ರೆಕ್ಕೆ
ಬಿಚ್ಚಿ ಪುಟಿಯುತ್ತಿತ್ತು, ಕ್ಷಣ ಮಾತ್ರ
ಆಳ ನೀರಲಿ ಮಾಯವಾಗಿತ್ತು...

ಧೂಳು ತುಂಬಿದ ದಾರಿಗಳ
ನಡುವೆ ಒಣಗಿದೆಲೆಗಳ ಮರ
ನೋಡಿ ನಕ್ಕಿತ್ತು ನೆರಳ ಕೊಟ್ಟು
ಒಂದು ಘಳಿಗೆಯ ಗಾಳಿ
ನೆರಳ ಸಂತಸ ಕಿತ್ತಿತ್ತು,
ಧೂಳು ತುಂಬಿದ ಕಣ್ಣೀರೊಳಗೆ
ನಕ್ಕ ಮರವೂ ಬೆತ್ತಲಾಗಿತ್ತು...

ಹಡೆದವ್ವ!

ಮೂಡಣದಲಿ ಬಾನ ಯೋನಿ ಗರ್ಭವ
ಸೀಳಿ ಭಾನು ತಾನು ಮುಗುಳ್ನಕ್ಕಿದ್ದ
ಕಡುಕೆಂಪಡರಿತ್ತು ಅವಳ ಕೆನ್ನೆ ನಾಚಿ
ನಿತ್ಯವೂ ಅವಳು ಭಾಸ್ಕರನ ಹಡೆದವ್ವ

ನಡು ಮಧ್ಯಾಹ್ನ, ಬಿಸಿಲ ಬುಗ್ಗೆಯ ಬೆಂಕಿ
ಸುಡುತ್ತಾನೆ ಅವಳೆದೆಯ ನೆನಪಿಲ್ಲದಂತೆ
ಆದರವಳು ಸಹನಾಮೂರ್ತಿ, ಅದೇ ನೀಲವರ್ಣ

ಮತ್ತೆ ಕರುಣಾಮಯಿ, ಇಳಿಬಿಸಿಲ ಸಿಂಚನ
ಅವಳ ತೆಕ್ಕೆಗಳ ತೊಟ್ಟಿಲೊಳಗೆ ಜಾರಿ
ಕರಗುತ್ತಾನೆ, ಸಂಜೆಯ ರಸದಿಂಚರ
ಅವಳೋ, ಆ ತಾಯಿ ಹೃದಯ ಮತ್ತೆ
ರಂಗೇರುತ್ತದೆ ಉರಿ ಬಿಸಿಲ ಮರೆತು...!

======
ಚಿತ್ರಕೃಪೆ: allfreelogo.com


ಸೋಮವಾರ, ಅಕ್ಟೋಬರ್ 10, 2011

ಒಂದು ಕತೆ - "ಅಮ್ಮ ಸಿಕ್ಕಿದಳು ಮತ್ತೊಮ್ಮೆ".

ಇಂದು ಆ ಹಿರಿಯ ಜೀವದ ಕಣ್ಣುಗಳಲಿ ತೊಟ್ಟಿಕ್ಕಿದ ಒಂದು ಹನಿ ಕಣ್ಣೀರ ಧಾರೆ ಆ ಹೆಣ್ಣು ಮುಖದ ಕೆನ್ನೆಗಳಲ್ಲಿ ಕೃತಜ್ಞತೆಯಲ್ಲಿ ಜಾರಿದ ಕಣ್ಣೀರು ಆಸ್ಪತ್ರೆಯ ಹಾಸಿಗೆಯ ಮೇಲೆ ಲೀನವಾದಾಗ ಮತ್ತೊಂದು ತಾಯಿ ಕರುಳ, ಕರುಣೆಯ ಕಣ್ಣಿನ ಆ ಒಲವ ಕಂಡು ಮತ್ತೊಮ್ಮೆ ಆ ಅಮ್ಮನ ಹೊಟ್ಟೆಯಲಿ ಮಗುವಾಗಿ ಭುವಿ ಕಾಣುವ ಆಸೆ ಹುಟ್ಟಿತ್ತು ಮನದಲ್ಲಿ.
**************************************************************
ಸೂರ್ಯನ ನೋಡದ ನಾವುಗಳು ಕಚೇರಿಗೆ ಬರುವುದು ಬೆಳಿಗ್ಗಿನ ಐದುವರೆಗೆ. ಬೆಳಗ್ಗೆ ಸರಿ ಸುಮಾರು ಆರೂವರೆಯ ಸಮಯ. ಲೆಕ್ಕಶಾಸ್ತ್ರದ ಕಾಗುಣಿತ ದಲ್ಲೇ ಮುಳುಗಿದ್ದ ನನ್ನ ತಲೆಗೆ ಎಚ್ಚರದ ಗಂಟೆ ಕೊಟ್ಟಿದ್ದು ನನ್ನ ಡೆಸ್ಕ್ ಫೋನಿನ ರಿಂಗಣ. ಅನಿರೀಕ್ಷಿತ ಕರೆ. ನಂಬರ್ ವೀಕ್ಷಿಸಿದೆ, ತಕ್ಷಣಕ್ಕೆ ಅರಿವಾದದ್ದು ನನ್ನದೇ ಕಚೇರಿಯಲ್ಲಿ ನನ್ನ ತಂಗಿಯೆಂದೆ ಕರೆಯಲ್ಪಡುವ ನನ್ನ ಸಹವರ್ತಿಗೆ ಬಂದ, (ಮದುವೆಯಾದ ಮೇಲೆ ಅಮೇರಿಕ ಪಾಲಾದ) ಅವಳ ಅಕ್ಕನ ಕರೆಯೆಂದು. ಸ್ವೀಕರಿಸಿ ಹಲೋ ಎಂದವನೇ ಕರೆದೆ ತಂಗಿ ಸುನೀತಿಯನ್ನು. ಮತ್ತೆ ಮುಳುಗಿದ್ದು ಅದೇ ಲೆಕ್ಕಾಚಾರದಲ್ಲಿ. ಆದರೂ ನಡು ನಡುವೆ ಕರೆಯಲ್ಲಿ ಮುಳುಗಿದ ಸುನೀತಿಯ ಹಣೆಯಲ್ಲಿ ಮೂಡಿಬಂದ ಗೆರೆಗಳು ನನ್ನ ಕಣ್ಣುಗಳಲ್ಲಿ ಹಾಗೆ ದಾಖಲಾಗುತ್ತಿದ್ದವು.

ಫೋನಿನ ಕರೆ ಮುಗಿಸಿ ಡೆಸ್ಕಿಗೆ ಹಿಂತುರಿಗಿದವಳ ಕಣ್ಣಾಲಿಗಳಲಿ ಕಂಬನಿಯ ಕೆರೆ ಕಂಡು ದಂಗಾದೆ. ಕರೆದ ನನ್ನ ಮೆದು ಮಾತಿನಲಿ ಅವಳ ನೋವ ನಿಗೂಢತೆಯ ಅರಿವ ಹಂಬಲವಿತ್ತು. ಪಾಪ ಒಂಟಿ ಹೆಣ್ಣು ಮಗಳು ಅಮ್ಮನ ಜೊತೆ. ಐದನೇ ತರಗತಿಯಲಿದ್ದಾಗಲೇ ಅಪ್ಪನ ಕಳಕೊಂಡಿದ್ದ ಬಾಲೆ. ಸಂಬಂಧಿಕರ ಕೆಂಗಣ್ಣು, ವಾರೆನೋಟ, ಕುಹಕಗಳಿಗೆ ಬಲಿಪಶು. ಹೆಣ್ಣು ಜೀವಗಳು ಎಂಬ ನಿಷ್ಕೃಷ್ಟ ಮನೋಭಾವ . ಇವಿಷ್ಟು ನನಗೆ ಗೊತ್ತಿತ್ತು. ಈಗಿನ ಕಣ್ಣೀರ ಕತೆ ಕೇಳಿದೆ. ಅಮ್ಮನ ಪರಿಸ್ತಿತಿ ಬಿಗಡಾಯಿಸಿದೆ ಎಂದಳು. ಅನುಮತಿಯಿತ್ತೆ. ಒಂದು ಕ್ಷಣ ಅವಳ ಮುಖ ನೋಡಿ ದಂಗಾದೆ. ಅಷ್ಟೇ.
**************************************************************
ಮನಸು ಹೊರಳಾಡಿತ್ತು , ನನ್ನ ನೆನಪ ಸರಮಾಲೆ ಬೆಂಗಳೂರಿನ ಸೈಂಟ್ ಫಿಲೋಮಿನ ಆಸ್ಪತ್ರೆಯ 'ಈ-ವಾರ್ಡ್' ಕೊಠಡಿ ಸಂಖ್ಯೆ ಹದಿನಾರರಲ್ಲಿ ನೆಟ್ಟಿತ್ತು .ಕಚೇರಿಯಿಂದ ಹೊರಟು, ಆ ಅಮ್ಮನ ಆಸ್ಪತ್ರೆಗೆ ಸೇರಿಸಿ, ಗೈನಾಕಾಲೋಜಿಸ್ಟ್ ಡಾ. ಸುಜಾತರ ಸಲಹೆಯ ನಂತರ ನಿಟ್ಟುಸಿರು ಬಿಟ್ಟು ವಾಪಸು ನಾನು ಮನೆ ತಲುಪಿದ ನಂತರವೂ ಎಲ್ಲೋ ನೋವ ಕ್ಷಣದಲ್ಲೂ ಮನದ ಮೂಲೆಯಲಿ ಮಗದೊಂದು ಮಾತೆಯ ಪ್ರೀತಿಯ ಬಿಸಿಯಪ್ಪುಗೆ.

ಈಗ ಈ ಕತೆ ಬರೆಯುತ್ತ ಕೂತಿದ್ದೇನೆ. ಮೆದುಳು ಮಾತ್ರ ಮೆಲುಕು ಹಾಕಿದ್ದು - "ಅಮ್ಮ ಸಿಕ್ಕಿದಳು ಮತ್ತೊಮ್ಮೆ".

ಶನಿವಾರ, ಅಕ್ಟೋಬರ್ 8, 2011

ಎಲ್ಲಿರುವೆ?

ನಿದ್ದೆ ಬಾರದ ರಾತ್ರಿಗಳ ಯುಗಗಳಲಿ
ಅವಳದೇ ನೆನಪ ಸರಮಾಲೆಯಲ್ಲಿ
ನನ್ನ ಮನ ಬೆಂದು ಬೇಗುದಿಯಾಗಿತ್ತು

ಮಳೆ ನೀರ ಸಿಂಚನದ ಹನಿಯಲ್ಲಿ
ತಂಪ ಕೊಡುವಂತೆ ಅವಳು ಅಂದು,
ನನ್ನ ಬಳಿಯಿಲ್ಲ ಇಂದು, ನೆನಪು
ಎದೆಗೆ ಚುಚ್ಚಿದ ಗುಂಡು ಸೂಜಿ
ಎರಡು ತೊಟ್ಟು ರಕ್ತದ ಪರಿಮಳ


ಹುರಿದುಂಬಿ ಉಕ್ಕಿ ಹರಿವ ನದಿ
ಅಂದು ಅವಳು, ನಾನೂ ತೊರೆ
ಹರಿವ ನದಿಯ ಬಿಗಿದಪ್ಪಿಕೊಳ್ವಂತೆ
ಉತ್ಸುಕದ ಮನ, ಇಂದು ನೀರಿಲ್ಲ
ಎರಡು ಕಲ್ಲ ಕೊರಡುಗಳ ಬರಡು

ಗರಿ ಬಿಚ್ಚಿ ನಲಿವ ನವಿಲು ನರ್ತನ
ಮೇಘಗಳ ಚಿಲಿಪಿಲಿ ಆಗಸದಲಿ ಅಂದು
ಹಾರಿ ಹೋಗಲು ರೆಕ್ಕೆಯಿಲ್ಲದ ಕಾಗೆ
ನಾನಿಂದು, ದನಿಯಿಲ್ಲ ಗಂಟಲಲಿ
ತ್ರಾಣವೆಲ್ಲಿ ಅವಳ ಕೂಗಿ ಅರಸಲು?

ನನ್ನ ಜ್ವರ ಮತ್ತು ಅವಳು ಎಂಬ ಮರೀಚಿಕೆ....

ಮೈಗೆ ಸೋಕಿದ ಜ್ವರಕೂ ಗೊತ್ತು ನಾನು ಬಗ್ಗುವವನಲ್ಲ
ಕುಂತೆ ಬರೆಯಲು, ನನ್ನ ಜ್ವರವ ಇಲ್ಲಿ ಇಳಿಸಿದ್ದೆ ನಿಮಗೆ

ಹಟಮಾರಿ, ಕೆಂಡಗಟ್ಟಿದೆ ನಿನ್ನೆವರೆಗೆ ತಂಪಗಿದ್ದ ಮನ
ಮೂಗ ಹೊರಳೆಯದೋ ಸತ್ಯಾಗ್ರಹ, ಬಾಯಿ ತೆರೆಸಿದೆ
ಜೀವ ಹಿಂಡುತಿದೆ ಗಂಟುಗಳಲಿ ಅಲ್ಲಲ್ಲಿ ನೋವ ಬಾಧೆ

ದವಖಾನೆಯ ಡಾಕ್ಟರ ರದ್ದೂ ಒಂದೇ ರಾಗ, ಅಪ್ಪಿಕೊಳ್ಳಿ
ಹಾಸಿಗೆಯ ಬಿಡದೆ, ಗುಳಿಗೆಗಳ ಪಟ್ಟಿ ಪಟ್ಟಿ ಸರಪಳಿ,
ನಾಲಗೆಗೆ ತಾಕಲೂ ಇಲ್ಲ ಗಂಜಿಗೆ ಹಾಕಿದ ಉಪ್ಪು, ಹುಳಿ
ಮೂರು ಕಂಬಳಿ ಹೊದ್ದರೂ ಬಿಡಲೊಲ್ಲೆನೆಂತು ಮೈಯ ಚಳಿ

ಚಾವಣಿಯ ಬಿಳಿಯ ಬಣ್ಣ ಕಲೆತಿತ್ತು ಕಣ್ಣ ಗೂಡೊಳಗೆ
ಮನಸು ಹುಡುಕಾಡುತಿತ್ತು, ಇಲ್ಲದಾ ಅವಳ ಆರೈಕೆಗೆ
ಒಂದು ಆಸೆ ಕಾದ ಮೈಯ ಬೇಯ್ವ ಮೆದುಳೊಳಗೆ
ಎಂದು ಬರುವಳೋ ಎಲ್ಲಿರುವಳೋ ಎಂಬ ತವಕಕ್ಕೆ
ಜ್ವರದಲೂ ಪುಳಕಗೊಂಡಿದ್ದೆ, ಮನದ ಮುದಕೆ....