ಶನಿವಾರ, ನವೆಂಬರ್ 26, 2011

ಸಿಕ್ಕವಳು ನನ್ನ ತಂಗಿ, ಮತ್ತೊಂದು ಬಿಳಿ ಹಾಳೆ

ಬರೆಯುತ್ತಾ ಹೋದೆ,
ಮೊದಲಿಗೆ ಹುಡುಗಿ ಸಿಕ್ಕಳು,
ತಲೆ ನೇವರಿಸಿ ತಂಗಿ ಎಂದು ಕರೆದೆ,
ತಲೆ ಭುಜಕಾನಿಸಿ ಅಣ್ಣ ಎಂದಳು
ಜೊತೆಯಿರುವೆ ಎಂದೆ ಎಂದೆಂದೂ
ಇನ್ನೇನು ಎರಡು ಸಾಲು ಬರೆಯಬೇಕೆಂದೆ..
ಹಿಂದೆಯೇ ನಾಯಿಯೊಂದು ಬಂದು ನಿಂತಿತು
ಬೊಗಳುತ್ತಿಲ್ಲ, ಕಣ್ಣು ಬಿಡುತಿದೆ
ನನ್ನ ನೋಡುತ್ತಿಲ್ಲ, ತಂಗಿಯ ಎದೆಯಲ್ಲಿ
ಅದರ ಕಣ್ಣು, ಮೂಗು ಅರಳಿಸಿ, ಜೊಲ್ಲು...
ಬರಹದೊಳಗೆ ಅವಳ ಇಟ್ಟೆ,
ನಾಯಿ ಬೊಗಳಿತು, ಬರಹಕ್ಕೆ
ಮೂಳೆ ಹೆಕ್ಕಿ ತಂದು ಬಿಸುಟಿದೆ
ನಾಯಿ ಹೋಗಲೊಲ್ಲದು, ಯಾಕೋ?
ನನ್ನ ಲೇಖನಿಯಲೇ ತಿವಿದೆ, ಕಚ್ಚುವ ಭಯವಿತ್ತು,
ಇಲ್ಲ, ಅಲುಗಾಡಲಿಲ್ಲ, ಜೊಲ್ಲು ಇನ್ನೂ
ಸುರಿಯುತ್ತಲೇ ಇತ್ತು, ಕಣ್ಣು ನೀಲಿಯಾಗಿತ್ತು
ಹ್ಮ್, ಇಲ್ಲ ನಾಯಿಯದು, ಮತ್ತದೇ ರಾಗ
ನನ್ನ ಬರಹವ ದಾಟಿ ಅವಳೆದೆಯ ಮೇಲೆ
ತನ್ನ ಜೊಲ್ಲ ಕಲಶವ ಇಡುವ ಆಸೆಯೇನೋ?
ನನ್ನ ಮನಸು ಒಂದು ಕ್ಷಣ ನಿರ್ದಯಿ
ಮುಳ್ಳಾಯಿತು ಪೆನ್ನು, ಚುಚ್ಚಿದೆ ನೀಲಿ ಕಣ್ಣ
ಅಲ್ಲಿ ರಕ್ತದೊಸರು, ಬರಹ ಕೆಂಪಾಗಿತ್ತು,
ನಾಯಿ ಓಡಿದರೂ, ತಂಗಿ ಉಳಿದಿದ್ದಳು
ಜೊಲ್ಲು ಸೋಕದ ನನ್ನ ಬರಹದ
ಬಿಳಿ ಹಾಳೆಯ ಮೇಲೆ ನಗುವ ಕಣ್ಣಿನ
ಮಂದಹಾಸವ ಬೀರುತ್ತಾ ಇಂದಿಗೂ...

2 ಕಾಮೆಂಟ್‌ಗಳು:

  1. ಕವಿತೆಯಲ್ಲಿ ಉತ್ತಮ ಹೃದ್ಯ ಸಂವೇಧನೆಯಿದೆ ಪುಷ್ಪಣ್ಣ. ತಂಗಿ-ಅಣ್ಣ ಮತ್ತು ನಾಯಿ.ಅಲ್ಲಿ ಗಾಳಿಗೆ, ಬೆರಳಿಗೆ ತಿಣುಕಾಡಿದ ಬಿಳಿ ಹಾಳೆಯ ಮೇಲಿನ ಮಾತುಗಳು.ಸೂಕ್ಷ್ಮ ಸಂವೇಧನೆಯನ್ನು ಗುರುತಿಸಿದ್ದೇನೆ.ಮಾತುಗಳ ವಾಕ್ಯಕ್ಕೆ ಉಸಿರು ಉಬ್ಬುಗಂಟಿಕ್ಕಿದಂತೆ ಬರುವ ವಾಸ್ತವವನ್ನು ಇಲ್ಲಿಯೂ ನೀವು ಉಪಯೋಗಿಸಬೇಕು. ಅರ್ಥವಾಗಲಿಲ್ಲ ನಿಮಗೆ ಅಂತ ಭಾವಿಸುತ್ತೇನೆ. ಅಂದರೆ ತೀವ್ರತೆಗೆ ಬರುವ ವಾಕ್ಯಕಗಳನ್ನು ಅಲ್ಪವಿರಾಮ, ಹಾಕಿದಂತೆ ತುಂಡರಿಸಿ. ಮುಂದಿನ ಸಾಲು ಪಾದದಿಂದ ಶಿರಕ್ಕೆ ತಲಪಿದಷ್ಟು ಸಂತೃಪಿ ಸಿಗಬಹುದು.

    ಪ್ರತ್ಯುತ್ತರಅಳಿಸಿ
  2. ಅಮೂರ್ತವನ್ನು ಮೂರ್ತತೆಗೆ ಒಕ್ಕಣಿಸುವಾಗ ತುಸು ಕಸರತ್ತು ಕೇಳುತ್ತದೆ.

    ಪಾತ್ರಗಳನ್ನು ಬರಹವಾಗಿಸುವಾಗ ಕವಿಯ ಪರಿಯಾಟಲನ್ನು ನೀವು ನೀಟಾಗಿ ದಾಖಲಿಸಿದ್ದೀರ.

    ನನ್ನ ಬ್ಲಾಗಿಗೂ ಬನ್ನಿರಿ.

    ಪ್ರತ್ಯುತ್ತರಅಳಿಸಿ