ಶನಿವಾರ, ಸೆಪ್ಟೆಂಬರ್ 3, 2011

ತೊಳಲಾಟ

ಒಂಟಿ ಜೀವ, ಕಣ್ಣ ನೀರ ಹನಿ
ಬಾಡಿದ ಕೆನ್ನೆಯ ಮೇಲೆ,
ಸುಕ್ಕುಗಟ್ಟಿದ ಮಿದುಳೊಳಗೆ
ಸಾವಿರ ನೆನಪ ಮಿಂಚುಗಳು

ಕೆಂಪಡರಿದ ಕಬ್ಬಿಣದ ಸಲಾಖೆಯ
ಬರೆಯೆಳೆದಂತೆ ಎದೆಯಲೆಲ್ಲೋ
ನಾ ಮಾಡಿದ ತಪ್ಪುಗಳ ಪ್ರಪಾತ
ಹೊಟ್ಟೆ ಬಗೆದು ಕರುಳು ಕೀಳುವ
ನೋವ ಬಿರುಮಳೆ... ಪ್ರಾಯಶ್ಚಿತ್ತವೆಲ್ಲಿ...?

ಕ್ಷಣ ನಿಶ್ಚಲ.. ಮೇಲೆ ಕರಿಮೋಡದ
ಆಕಾಶ, ಬದುಕು ಬರ್ಬರ..
ನೀರ ಮೇಲೆತ್ತಿದ ಮೀನಾಗುವ
ಬಯಕೆ, ಮರೆತು ಬಿಟ್ಟೀತೆ
ಜಗವು ನನ್ನ ಆ ಕೊಳಕುಗಳ?

ಧೃಡ ಮನಸ್ಸು, ಅಚಲತೆ...
ಮತ್ತೆ ಮಲ್ಲಿಗೆಯ ಹೂವಾಗುವೆ
ಮತ್ತದೇ ಪ್ರಶ್ನೆ.. ಕೊಳಕು ನಾರಿದ
ತಪ್ಪುಗಳ ಮೇಲೆ ಮಲ್ಲಿಗೆಯ
ಪರಿಮಳವು ಕಂಪನಿತ್ತೀತೆ..?

1 ಕಾಮೆಂಟ್‌:

  1. ನಿಜ ಒಮ್ಮೆ ಪತಿತವಾದ ಮನಸ್ಸು ಪಾವನವಾಗುವುದು ಸುಲಭ ಸಾಧ್ಯವಲ್ಲ. ಹಾಗೆಂದು ವರ್ಜ್ಯವಾಗಿಸೋ ಜಗದ ನಿಯಮವೂ ಸರಿಯಲ್ಲಿ.

    ಉತ್ತಮ ವಸ್ತು ಹೊಂದಿರುವ ಚಿಂತನಶೀಲ ಕವನ.

    ಪ್ರತ್ಯುತ್ತರಅಳಿಸಿ