ಮಂಗಳವಾರ, ಆಗಸ್ಟ್ 23, 2011

ಬದುಕು


ಎಲೆ ಮಾಸಿದ ಮರ,
ತುತ್ತ ತುದಿಯಲೊಂದು
ಪುಟ್ಟ ಗೂಡೊಳಗೆ
ಮೂರು ಮರಿಗಳ ಜೀವ..
ರೆಕ್ಕೆ ಬಲಿತಿಲ್ಲ....

ಅಮ್ಮನಿಲ್ಲದ ದಿನ,
ಮೇಲೆ ಬಿಸಿಲ ಬೇಗೆ,
ಕಡಲತಡಿಯ ಸುಳಿರ್ಗಾಳಿಗೆ
ಗೂಡಿನ ಗರಿಗಳುದುರಿ
ಒಂದು ತೂತು......

ರೆಕ್ಕೆಯಿಲ್ಲದ ಹಾರಾಟ
ಕೆಳಗೆ ಕಲ್ಲು ಬಂಡೆ..
ಆಸೆಗಳ ತೊಟ್ಟಿಲ್ಲಿಲ್ಲ
ಕನಸುಗಳ ಬಲೆಯಿಲ್ಲ,
ಮೂರು ದಿನಗಳ ಬಾಳ
ಸಂಭ್ರಮ.............

ಶುಕ್ರವಾರ, ಆಗಸ್ಟ್ 19, 2011

ಬದುಕ ದಾರಿಯ ನೆನಪ ಹತ್ತಿ...

ಒಂದು ಬಡ ಜೀವ... ಮೂಳೆಯೇ ಮಾಂಸ ಖಂಡಗಳು
ತೂತು ಚಾಪೆಯ ಮೇಲೆ ಬೋರಲು,
ಕಂಬನಿಯ ಸುಳಿವಿಲ್ಲ, ತೊಟ್ಟಿಕ್ಕುವ ಮಳೆ ಹನಿಯ
ಸದ್ದು ಗೋಡೆಯಿಲ್ಲದ ಜೋಪಡಿಯೊಳಗೆ,
ನೊಣದ ಝೇಂಕಾರ ನೀರ ಲೋಟದ ಮೇಲೆ,
ನಾಯಿ ಬೊಗಳಿದ ಕೂಗು ಎಲ್ಲೋ ದೂರದಲಿ
ತಡಪಡಿಸುತಿದೆ ಒಂಟಿ ಜೀವ, ಆಸರೆಯ ಹಂಬಲ
ತುಟಿ ಕಲ್ಲು ಬಂಡೆ, ನಾಲಗೆಯೂ ಮರುಭೂಮಿ,
ಒಂದಿಂಚಿನ ಉಸಿರು ಮೂಗ ಹೊರಳೆಯೊಳಗೆ
ಕಾಲು ಮರಗಟ್ಟಿದೆ, ಕೈ ಬೆರಳು ಒಣ ಕೊರಡು,
ಹುಳಗಳೂ ಸತ್ತು ಮಲಗಿವೆ ಉದರದೊಳಗೆ....

ಉಸಿರುಗಟ್ಟಿದ ಮೆದುಳ ಮೂಲೆಯೊಳಗೆ ದೇವರ
ಹೆಸರ ಪಟ್ಟಿ, ಎಲೆಯಿಲ್ಲದ ಒಣಮರಗಳ ಸಾಲುಗಳಲಿ
ಸವೆದ ಬದುಕ ದಾರಿಯ ನೆನಪ ಹತ್ತಿ.....................

ಶನಿವಾರ, ಆಗಸ್ಟ್ 13, 2011

ತಂಗೀ.........

ನಾನು ನದಿ, ನೀನು ಮೀನು
ನನ್ನ ನೀರಿನ ಉಸಿರು ನಿನಗೆ,

ನಾನು ಮಣ್ಣು, ನೀನು ಗಿಡವು
ನನ್ನ ಸತುವಿನ ಪುಷ್ಟಿ ನಿನಗೆ

ನಾನು ಎಲೆ, ನೀನು ಹೂವು
ಒಂದೇ ಬಳ್ಳಿಯ ಹಿತವು ಎಮಗೆ,

ನಾನು ಮೋಡ, ನೀನು ಭೂಮಿ
ಹನಿ ಮಳೆಯ ತಂಪು ನಿನಗೆ

ನಾನು ರವಿ, ನೀನು ತಿಂಗಳು
ಹುಣ್ಣಿಮೆಯ ಬೆಳಕು ನಿನಗೆ,

ಇದೋ ಈ ರಕ್ಷೆ ನಿನಗೆ
ಭ್ರಾತೃತ್ವ ಬಂಧನದ
ಅವಿರತ ಪ್ರೀತಿಯಿಂದಲಿ!

ಶನಿವಾರ, ಆಗಸ್ಟ್ 6, 2011

ಕವಿ ನಾನು

ಕೆಸರಲಿ ಕದಡಿದ ಬಳ್ಳಿಗೆ
ಬಿಳಿಯ ಹೂವ ಬಿಡುವ ತವಕ
ತನ್ನುಸಿರ ಪಣವಿಟ್ಟು,

ಮುಳ್ಳು ತುಂಬಿದ ಗಿಡಕೆ
ಸಿಹಿ ಹಣ್ಣ ಕೊಡುವ ಹಂಬಲ
ನೋವ ತನ್ನೊಳಗಿಟ್ಟು

ಕರಿಮೋಡವಾದರೂ ನಿಡು
ಸುಯ್ಯುವಾಸೆ ಎಡೆಬಿಡದೆ
ಸೋನೆಯ ಸುವಾಸನೆ

ನೂರು ಕನಸುಗಳ ಕಂಡು
ಕವಿಯಾದೆ ನಾನಿಂದು
ಕನ್ನಡದ ಮಗನಾಗಿ....